Friday, July 9, 2010

ಮನಸಿನ ಕನಸು

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ,
ಯಾವ ಮೋಹನ  ಮುರಳಿ ಕರೆಯಿತೋ ದೂರ ತೀರಕೆ ನಿನ್ನನು ...........................


ಹಾಡು ಇವತ್ತಿಗೆ ಯಾಕೋ ತುಂಬಾ ಅರ್ಥಪೂರ್ಣ ಅನಿಸಿತ್ತು , ಕೈಯ ಮೇಲೆ ನಿನ್ನ ಕೈ ಇತ್ತು, ಹೆಗಲ ಮೇಲೆ ನಿನ್ನ ತಲೆಯಿತ್ತು.
ಮನಸು ನೂರೊಂದು ಕನಸ ಕಾಣುತ್ತಿತ್ತು.

Thursday, June 3, 2010

ಕಿವಿ ಮೇಲೊಂದು ಹೂವು !

     ಬೆಳಗಾವಿಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ದಿನಗಳು. ಓದಲೆಂದು ದೂರದ ಊರುಗಳಿಂದ ಬೆಳಗಾವಿಗೆ ಬಂದವರು ನನ್ನಂತೆಯೇ ಹಲವರು. ಬೆಳಗಾವಿಯಲ್ಲಿ ಹೋಟೆಲ್, ಟ್ರಾವೆಲ್ ಎಜೆನ್ಸಿ,ಪಾನ್ ಅಂಗಡಿ ಅಂತ ಮಂಗಳೂರು ಉಡುಪಿ ಕಡೆಯವರಿಗೇನೂ ಕಡಿಮೆಯಿಲ್ಲ. ಹೋದ ಹೋದ ಅಂಗಡಿಗಳಲ್ಲಿ , ನೀವು ಮಂಗಳೂರು ಕಡೆಯವರಾ ? ನಾವು ಕೂಡ ಮಂಗಳೂರವರು ಅಂತ social networking ಮಾಡೋದು , ಮಂಗಳೂರು ಕಡೆ ಬರುವ ಬಸುಗಳ ಡ್ರೈವರ್, ಕಂಡಕ್ಟರ್ ಗಳ ಪರಿಚಯ ಮಾಡ್ಕೊಳ್ಳೋದು ಅಂದ್ರೆ ಖುಶಿಯೋ ಖುಶಿ ಇದರ ಪರಿಣಾಮವೇ ಪಟ್ಟಿ ಅಂಗಡಿ ಜಗ್ಗಣ್ಣ , ಪಟ್ಟಿ ಅಂಗಡಿ ರಾಮಯ್ಯಣ್ಣ, ಕೊಲ್ಹಾಪುರ್ ಸರ್ಕಲ್ ಪಟ್ಟಿ ಅಂಗಡಿ , ಅಣ್ಣಪ್ಪ ಟೀ ಸ್ಟಾಲ್ , ಮಂಜುನಾಥ ಟೀ ಸ್ಟಾಲ್ , ಹೋಟೆಲ್ ದೀಪ, ಮಿನಿ ಮಂಗಳೂರು ಆಗಿದ್ದ ಹೋಟೆಲ್ ರಾಮದೇವ್ ಕಾಂಪೌಂಡ್, ಹೋಟೆಲ್ ವಿಘ್ನೇಶ್ ಅಯ್ಯಯ್ಯೋ ಒಂದೇ ಎರಡೇ , ಹೋದ ಕಡೆ ಎಲ್ಲ ಊರವರು ಅನ್ನೋ special treatment.

    ಬೆಳಗ್ಗೆ breakfast ಗೆ ನಮ್ಮ ಪಟಲಾಮಿನ ಸದಸ್ಯರು ಅಂದು ಶ್ರೀನಿವಾಸರ ಅಣ್ಣಪ್ಪ ಟೀ ಸ್ಟಾಲ್ ಹತ್ರ ಸೇರಿದ್ದರು. ಲೋಕಾಭಿರಾಮ ಮಾತಾಡುತ್ತ, ಉದಯವಾಣಿ ಪೇಪರ್ ಓದುತ್ತ, ಚಹಾ ಕುಡಿಯುತ್ತಾ ಇದ್ದವನಿಗೆ ಹೊಸ ಮುಖದ ವ್ಯಕ್ತಿಯೊಬ್ಬ ಶ್ರೀನಿವಾಸರ ಹತ್ತಿರ ತುಳು ಮಾತನಾಡುವುದು ಕೇಳಿಸಿತ್ತು. ಇವ್ರು ವಿವೇಕ್ ಅಂತ ಊರವರು , ಇಲ್ಲಿ ಇಂಜಿನಿಯರಿಂಗ್ ಮಾಡ್ತಿದ್ದಾರೆ ಅಂತ introduction ಬೇರೆ ಆಯಿತು. ಆ ವ್ಯಕ್ತಿ ಕುಶಲೋಪರಿ ಶುರು ಮಾಡ್ತು.

ಊರಲ್ಲಿ ಎಲ್ಲಿ ?
ಕಾಸರಗೋಡು .
ನಂದೂ ಕಾಸರಗೋಡು, ಯಾರ ಮಗ , ಯಾರ ಮೊಮ್ಮಗ, ಇಲ್ಲಿ ಹಾಸ್ಟೆಲ್ ನಲ್ಲೋ ? ರೂಮ್ ಮಾದ್ಕೊಂಡಿದೀರೋ ?
ಕ್ಲಾಸ್ ಮೇಟ್ಸ್ ಜೊತೆ ರೂಮ್ ಮಾಡ್ಕೊಂಡು,
ಹೌದಾ , ಎಲ್ಲಿ ಬರುತ್ತೆ ರೂಮ್ ?
ಶಿವಾ ಹೋಟೆಲ್ ಮುಂದೆ "ಸಾಯಿ ಸದನ" . ನೀವು ಏನ್ ಕೆಲಸ ಮಾಡ್ತಾ ಇದ್ದೀರಿ ?
ನಾನು ಶಿರಡಿ ಗೆ ಹೋಗಿದ್ದೆ, ವಾಪಸು ಊರಿಗೆ ಹೋಗ್ತಾ ಇಲ್ಲಿ ಸಂಬಂಧಿಕರನ್ನು ಭೇಟಿಯಾಗಿ ಹೋಗೋಣ ಅಂತ ಬಂದಿದೀನಿ.

ಈಯಪ್ಪ ಯಾಕೋ ಬಿಡೋ ಲಕ್ಷಣ ಕಾಣಿಸ್ತಾ ಇಲ್ಲ ಅಂತ ಅನಿಸಿದ ಮೇಲೆ , ಇವತ್ತಿಗಿಷ್ಟು ಸಾಕು ಅಂತ, ನಮಗೆ ಕಾಲೇಜ್ ಗೆ ಹೋಗೋದಿದೆ ಅಂತ ಅಲ್ಲಿಂದ ಕಾಲು ಕಿತ್ತಿದ್ದೆ.

ಸಾಯಂಕಾಲ ಕಾಲೇಜು ಮುಗಿಸಿ ರೂಮ್ ಗೆ ಬಂದು ಕುಳಿತಿದ್ದಾಗ , ಪಕ್ಕದ ರೂಮಿನ ಮೆಡಿಕಲ್ ವಿದ್ಯಾರ್ಥಿ ಮಂಗಳೂರಿನ ಸುಧಾಕರ್ ಬಂದು , ರೀ ವಿವೇಕ್ ಮದ್ಯಾಹ್ನ ನಿಮ್ಮ ಚಿಕ್ಕಪ್ಪ ಬಂದಿದ್ರು. ಶಿರಡಿಗೆ ಹೋಗಿ ವಾಪಸು ಹೋಗ್ತಾ ಪರ್ಸ್ ಕಳೆದು ಹೋಯಿತಂತೆ, ಕೈ ಯಲ್ಲಿ ದುಡ್ಡಿಲ್ಲ , ಹಾಗಾಗಿ ವಿವೇಕ್ ನ meet ಮಾಡಿ , ಬಸ್ ಗೆ ದುಡ್ಡು ತೆಗೊಂಡು ಹೋಗೋಣ ಅಂತ ಬಂದೆ. ವಿವೇಕ್ ಬರೋದು ಸಾಯಂಕಾಲ ಆಗುತ್ತೆ ಅಂದಿದ್ದಕ್ಕೆ , ಅಷ್ಟು ಹೊತ್ತು ಕಾಯೋಕಾಗಲ್ಲ, ಈಗ ಬಸ್ miss ಆದ್ರೆ ಕಷ್ಟ ಆಗೋಗುತ್ತೆ. ದಯವಿಟ್ಟು ಒಂದು 5೦೦ ರೂಪಾಯಿ ಇದ್ರೆ ಕೊಡಿ ಮನೆಗೆ ಹೋದ ತಕ್ಷಣ ನಿಮ್ ದುಡ್ಡು ವಿವೇಕ್ ಗೆ ಕಳಿಸ್ತೀನಿ , ಆತ ನಿಮಗೆ ಕೊಡ್ತಾನೆ ಅಂದ್ರು. ನಿಮ್ ಅಪ್ಪನ , ಅಜ್ಜನ ಹೆಸರೆಲ್ಲ ಹೇಳಿದ್ರು . ಹಾಗಾಗಿ 5೦೦ ರುಪಾಯಿ ಕೊಟ್ಟೆ ಅವರಿಗೆ ಅಂದ.

ಬೆಳಗ್ಗೆ ಅಣ್ಣಪ್ಪ ಟೀ ಸ್ಟಾಲ್ ನಲ್ಲಿ ನನ್ನನ್ನು ಭೇಟಿಯಾಗಿ , ಕುಲ ಗೋತ್ರ ಜನ್ಮ ಜನ್ಮಾಂತರದ ಪೂರ್ಣ ವಿವರವನ್ನು ತಿಳಿದ ಆ ಮಹಾನುಭಾವ ಸುಧಾಕರನಿಗೆ 5೦೦ ರ ಪಂಗನಾಮ ಹಾಕಿ ದೊಡ್ಡ ಚೆಂಡು ಹೂವೊಂದನ್ನು ಕಿವಿ ಮೇಲೆ ಇಟ್ಟು ತೆರಳಿದ್ದ.

Friday, March 19, 2010

ಕಾನೂನು ಕತ್ತೆ

ಕಾನೂನು ಕತ್ತೆ , ಇದು ನನ್ನ ಕಥೆಗೆ , ನನ್ನ ಮಾವ ಕೊಟ್ಟ ಶೀರ್ಷಿಕೆ .......

ಆಫೀಸ್ ನಲ್ಲಿ ಯಾವುದೋ ಮೀಟಿಂಗ್ ನಡೆಯುತ್ತಿರುವಾಗ , ಮೊಬೈಲ್ ರಿ೦ಗಣಿಸಿತ್ತು. ಊರಿಂದ ಅಜ್ಜನ ಫೋನ್. ಮೆತ್ತಗೆ ಫೋನ್ ತೆಗೊಂಡೆ , "ವೇಕು ( ನನ್ನ ಶಾರ್ಟ್ ನೇಮ್ ) , income tax department ಸ್ಪೀಡ್ ಪೋಸ್ಟ್ ಬಂದಿದೆ , ತೆಗೊಬೇಕಾ ? ಅಥವಾ ರಿಟರ್ನ್ ಮಾಡಬೇಕಾ?" . "ತೆಗೊಳ್ಳಿ" ಎಂದು ಹೇಳಿ ಫೋನ್ ಇಟ್ಟೆ. ಆಫೀಸ್ ನಲ್ಲಿ ಕೆಲಸದ ಒತ್ತಡದ ಕಾರಣ ಮತ್ತೆ ಅದರ ಬಗ್ಗೆ ಯೋಚಿಸಲು ಸಮಯ ಸಿಗಲಿಲ್ಲ.


ಪ್ರತೀ ತಿಂಗಳ ಸಂಬಳದಿಂದ income ಟ್ಯಾಕ್ಸ್ ಪ್ರಾಮಾಣಿಕವಾಗಿ ತೆರುವವರು ನಾವು. ರಿಟರ್ನ್ ಫೈಲಿಂಗ್ ಕೂಡ ಸಮಯಕ್ಕೆ ಸರಿಯಾಗಿ ಮಾಡಿದ್ದೆ. ಟ್ಯಾಕ್ಸ್ ಗೆ ನಿಗದಿತ ಹಣವನ್ನೇ ಕಟ್ಟಿದ ಕಾರಣ , department ನಿಂದ returns ಬರೋದೇನೂ ಇರಲಿಲ್ಲ. ಮತ್ತೆ ಯಾವ ಕಾರಣಕ್ಕೆ ಸ್ಪೀಡ್ ಪೋಸ್ಟ್ ಕಳುಹಿಸಿರಬಹುದು ? ಯೋಚಿಸಿ ಯೋಚಿಸಿ ಹಾಳಾದ ತಲೆಗೆ ," ನಾನೇನೂ ಸರಕಾರಕ್ಕೆ ಮೋಸ ಮಾಡಿಲ್ಲ , ಕಟ್ಟಬೇಕಿರೋ ಟ್ಯಾಕ್ಸ್ ಕಟ್ಟದೆ , ತಲೆ ತಪ್ಪಿಸಿ ಕುಳಿತಿಲ್ಲ, ಆದಾಯಕ್ಕೆ ಸರಿಯಾಗಿಯೇ ಆಸ್ತಿ ಸಂಪಾದಿಸಿಲ್ಲ ಇನ್ನು ಆದಾಯಕ್ಕೆ ಮಿಗಿಲಾಗಿ ಆಸ್ತಿ ಸಂಪಾದಿಸಿದ್ದೀರಿ ಎಂದು notice ಬರುವ ಪ್ರಮೇಯವೇ ಇಲ್ಲ . ಹಾಗಾಗಿ ಗಲ್ಲು ಶಿಕ್ಷೆಯಂತೂ ಆಗಲಾರದು, ಯಾವತ್ತಾದರೂ ಊರಿಗೆ ಹೋದಾಗ check ಮಾಡಿದರಾಯಿತು" ಎಂದು ಸಮಾಧಾನ ಹೇಳಿದ್ದೆ.

ಮೊನ್ನೆ ಯುಗಾದಿಗೆ ಊರ ಕಡೆ ಹೋದವನಿಗೆ , ಅಜ್ಜ ಸ್ಪೀಡ್ ಪೋಸ್ಟ್ ಬಗ್ಗೆ ನೆನಪಿಸಿದರು. ಲೆಟರ್ ಬಿಡಿಸಿ ನೋಡಿದೆ. ಅದೇನೋ ಲೆಕ್ಕಾಚಾರಗಳು , ಯಾವುದೊ section ಗಳು , ಉಹುಂ ತಲೆ ಬುಡ ಗೊತ್ತಾಗಲಿಲ್ಲ. ಇನ್ನೊಂದು ಬಾರಿ ಸರಿಯಾಗಿ ಓದಿದಾಗ ಬರೆದಿದ್ದು ತಲೆಗೆ ಹತ್ತಿತು. ಕಳೆದ ವರ್ಷ ನಾನು ಕೆಲಸ ಮಾಡುವ ಕಂಪನಿ ಸುಮಾರು (ವಾರ್ಷಿಕ) 19376 ರುಪಾಯಿಗಳಷ್ಟು ಹಣವನ್ನು ನನ್ನ ಪ್ರತೀ ತಿಂಗಳ ವೇತನದಿಂದ income tax ಎಂದು ಕಡಿತಗೊಳಿಸಿ , ಸರಕಾರಕ್ಕೆ ದಯಪಾಲಿಸಿತ್ತು. ಅದಕ್ಕೆ ಫಾರಂ 16 ಕೂಡ ಸಿಕ್ಕಿತ್ತು. ಅದನ್ನೇ income tax return file ಮಾಡುವಾಗ ನಮೂದಿಸಿದ್ದೆ. ಆದರೆ department ನ ಪ್ರಕಾರ ನಾನು 19379 ರುಪಾಯಿಗಳಷ್ಟು ವಾರ್ಷಿಕ ತೆರಿಗೆ ತೆರಬೇಕಾಗಿತ್ತು. ಅಂದರೆ ನಾನು 3 ರುಪಾಯಿ ಕಡಿಮೆ ತೆರಿಗೆ ಕೊಟ್ಟಿದ್ದೆ. "ಅಕಟಕಟಾ ನನ್ನ ವಿಧಿಯೇ" 3 ಕೋಟಿಯೇ ? ಅಲ್ಲ 3 ಲಕ್ಷವೆ ? ಅದೂ ಅಲ್ಲ . 3 ಸಾವಿರ ಹೋಗಲಿ 300 ರುಪಾಯಿ , ಎಲ್ಲ ಬಿಟ್ಟು 3 ರೂಪಾಯಿಗಳು. ಊರ ಕಡೆ ಅದೇನೋ ಅಂತಾರೆ "ಉಮಿಲಿ ತಿಂದುದು ಜಾತಿ ಕಳೆವೊಂಡೆಗೆ" ಅಂತ.

ಕಾನೂನು ಕತ್ತೆ ಯಾಕಂತೀರಾ ? ಅಲ್ಲ ಮಹಾರಾಯರೇ.... 3 ರುಪಾಯಿ ಸರಕಾರಕ್ಕೆ ಕಟ್ಟು ಅಂತ ಹೇಳೋದಿಕ್ಕೆ , ಅದ್ಯಾವ ಪುಣ್ಯಾತ್ಮ 25 ರುಪಾಯಿ ಖರ್ಚು ಮಾಡಿ , ಸ್ಪೀಡ್ ಪೋಸ್ಟ್ ಕಳುಹಿಸಿದ್ದಾನೆ ? 25 ರುಪಾಯಿ ಖರ್ಚಾದರೂ ಪರವಾಗಿಲ್ಲ , ನಿನ್ನ 3 ರುಪಾಯಿ , ವಸೂಲಾತಿ ಮಾಡಿಯೇ ತೀರುತ್ತೇನೆ ಅನ್ನೋ income tax ನ ಛಲವಂತ ತ್ರಿವಿಕ್ರಮಾದಿತ್ಯನಿಗೆ ಅದ್ಯಾವ ಪ್ರಶಸ್ತಿ ಕೊಡ್ತೀರಾ ? ಅವನಿಗೇನು ಹೋಗುತ್ತೆ ಅಲ್ವಾ ? ಎಲ್ಲಾ ತೆರಿಗೆದಾರರ ಹಣ.

ಅವನೇನೋ ಕಳುಹಿಸುವ speed post ಕಳುಹಿಸಿಬಿಟ್ಟ . 3 ರುಪಾಯಿ ತೆರಿಗೆ ತೆರುವ ನನ್ನ ಪಾಡನ್ನು ಯೋಚಿಸಿ. ತೆರಿಗೆ ಕಟ್ಟಲು ಬ್ಯಾಂಕ್ ಗೆ ಹೋದರೆ , ನನ್ನನ್ನು ಮಂಗಳ ಗ್ರಹದ ಜೀವಿಯಂತೆ ನೋಡಿಯಾರು. ಅದಕ್ಕೆಂದೇ ಚಿಲ್ಲರೆ ತೆಗೆದುಕೊಂಡೇ ಹೋಗಬೇಕು. ಇಲ್ಲವಾದರೆ ನಿಮಗೆ ಗೊತ್ತಲ್ಲ ಅದರ ಗೋಳು. ತೆರಿಗೆ ಕಟ್ಟಿ ದ ರಶೀದಿಯನ್ನು income tax department ಗೆ ತೆಗೆದುಕೊಂಡು ಹೋಗಿ , ಕಳೆದ ವರ್ಷದ ರಿಟರ್ನ್ file ಮಾಡಿದ form ನ್ನು update ಮಾಡಿಸಬೇಕು. ಇದಕ್ಕೆ ಕಡಿಮೆಯೆಂದರೂ ಆಟೋ ರಿಕ್ಷಾ ಗೆ 100 ರುಪಾಯಿ ಕೊಡಬೇಕು. ಆಫೀಸ್ ಗೆ ಒಂದು ದಿವಸ ರಜಾ ಹಾಕಬೇಕು. ಇಲ್ಲದಿದ್ದರೆ ಗೊತ್ತಲ್ಲಾ ಕಾನೂನು ಕತ್ತೆ , ಅದೇನೂ ಮಾಡಬಲ್ಲದು.

 ಎಲ್ಲ ಯೋಚಿಸಿದಾಗ 3 ರುಪಾಯಿಗೋಸ್ಕರ 25 ರೂಪಾಯಿಗಳ ಸ್ಪೀಡ್ ಪೋಸ್ಟ್ ಕಳುಹಿಸಿದ ಕಾನೂನು ಕತ್ತೆಯೂ ಅಥವಾ ಕಂಪನಿ ಫೈನಾನ್ಸ್ ಡಿಪಾರ್ಟ್ಮೆಂಟ್ ಕೊಟ್ಟ form 16 ನ್ನು ಕಣ್ಣು ಮುಚ್ಚಿ ನಂಬಿದ ನಾನೇ ಕತ್ತೆಯೋ ಅರ್ಥವಾಗ್ತಾ ಇಲ್ಲ.

ಕೊನೆಗೆ ಒಂದು ಅನುಭವದ ಮಾತಂತೂ ಹೇಳ್ತೇನೆ. "ದೇವರು ವರ ಕೊಟ್ಟರೂ ಸರಿ , ಟೆಸ್ಟ್ ಮಾಡದೆ ತೆಗೊಬೇಡಿ , ಯಾಕಂದ್ರೆ ಕಾನೂನು ಕತ್ತೆ" .

Saturday, March 6, 2010

ಅಂತೂ ಬಂತು ಕಾರು ಕಲಿಕಾ ರಹದಾರಿ ಪತ್ರ

ಇದೇನಿದು ಕಲಿಕಾ ರಹದಾರಿ ಪತ್ರ ಅಂದ್ಕೊಂಡ್ರಾ ? Learner's License ಮಾರಾಯರೇ.....
ಸಾಫ್ಟ್ವೇರ್ ಇಂಜಿನಿಯರ್ , ಕಾರ್ ಬಿಡಲು ಬರೋದಿಲ್ವೇ ? ಮನೆಯಲ್ಲಿ ಮಕ್ಕಳಿಗೂ ತಮಾಷೆಯ ವಸ್ತುವಾಗಿ ಬಿಟ್ಟಿದ್ದೆ. ಹೌದಪ್ಪಾ ಬರಲ್ಲ , ಏನೀಗ ? ಇಂಜಿನಿಯರಿಂಗ್ ಕಾಲೇಜಲ್ಲಿ ಅದನ್ನ ಕಲಿಸಲಿಲ್ಲ , ಕೀ ಬೋರ್ಡ್ ಕುಟ್ಟೋದು ಬರುತ್ತಲ್ವ ........ ಪ್ರಶ್ನೆ ಅದಲ್ಲ ಹೆಂಡತಿಗೆ ಕಾರ್ ಡ್ರೈವ್ ಮಾಡೋದು ಬರುತ್ತೆ ನಿಂಗ್ ಬರಲ್ವ ? ಅಲ್ಲಿದೆ ಪಾಯಿಂಟ್....... ಇಷ್ಟು ಸಾಕಲ್ವ ಸ್ಫೂರ್ತಿ ಉಕ್ಕಿ ಉಕ್ಕಿ ಬರಲು , ಬಂತು... ಕಲಿತೇ ಸಿದ್ಧ.
ಮುಂದಿದ್ದ ಪ್ರಶ್ನೆ ಎಲ್ಲಿ ಕಲಿಯೋದು ? ಬೆಂಗಳೂರಲ್ಲಿ ಡ್ರೈವಿಂಗ್ ತರಬೇತಿ ಕೇಂದ್ರಗಳಿಗೇನೂ ಕಮ್ಮಿ ಇಲ್ಲ ಬಿಡಿ , ಆದ್ರೆ ಇಂಟರ್ನೆಟ್ಟಲ್ಲಿ ಕೆಲವೊಂದು ಡ್ರೈವಿಂಗ್ ಸ್ಕೂಲ್ ಗಳ ತರೇವಾರಿ reviews ಓದಿ ನಿಜವಾಗಿಯೂ ಭಯ ಬಿದ್ದಿದ್ದೆ. ದುಡ್ಡು ಕೊಟ್ಟು ,ಇಲ್ಲದ ತೊಂದರೆ ಮೈ ಮೇಲೆ ಎಳೆದು ಹಾಕಿಕೊಳ್ಳಲು ಸುತರಾಂ ಇಷ್ಟವಿರಲಿಲ್ಲ . ಯಾವುದೋ ಮಾರುತಿ ಡ್ರೈವಿಂಗ್ ಸ್ಕೂಲ್ ಇದೆ , ತುಂಬ ಸೇಫ್ , ಪ್ರೊಫೆಶನಲ್ ಸರ್ವಿಸ್ ಗೆಳೆಯರ ಮಾತು ಕೇಳಿ ಅಲ್ಲೇ ಸೇರಲು ಹೊರಟವನಿಗೆ ಇದು ಯಾಕೋ ತುಂಬ ತುಟ್ಟಿ ಅನಿಸಿತ್ತು. ಕ್ಲಾಸ್ ಗೆ ಬೇರೆ , ಲೈಸೆನ್ಸ್ ಗೆ ಬೇರೆ , ಟೆಸ್ಟ್ ಗೆ ಕಾರ್ ಬೇಕಿದ್ದರೆ ಅದರ ಬಾಡಿಗೆ ಬೇರೆ , ಅಯ್ಯಯ್ಯೋ ಇಷ್ಟೆಲ್ಲಾ ಕಷ್ಟ ಪಟ್ಟು ಕಾರ್ ಕಲೀಬೇಕಾ? ಮನೇ ಪಕ್ಕ ಇರೋ "ಅ ಆ ಇ ಡ್ರೈವಿಂಗ್ ಸ್ಕೂಲ್" ಸಾಕು ಅಂತ ತೆಪ್ಪಗೆ ಅಡ್ವಾನ್ಸ್ ಕೊಟ್ಟು ಬಂದೆ. "ನೀವು ಟೆನ್ಶನ್ ಮಾಡ್ಬೇಕಾಗೆ ಇಲ್ಲಾ ಸಾರ್ . ನೀವು ಬಂದು ಸೈನ್ ಮಾಡಿದ್ರೆ ಸಾಕು , ಇನ್ನೆಲ್ಲಾ ನಾವು ಮ್ಯಾನೇಜ್ ಮಾಡ್ತೀವಿ" ಅಂತ ಅಭಯ ಹಸ್ತ ಚಾಚಿದರು ಡ್ರೈವಿಂಗ್ ಸ್ಕೂಲ್ ನ ಪ್ರಿನ್ಸಿಪಾಲ್. ಧನ್ಯೋಸ್ಮಿ ಎಂದು ಮನೆಗೆ ಬಂದೆ.
ಶನಿವಾರದ ಶುಭ ದಿನ , Learner's License ತೆಗೊಳ್ಳಲು RTO ಆಫೀಸ್ ಗೆ ಹೋಗಬೇಕಾಗಿತ್ತು. ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಜಯನಗರದ RTO ಆಫೀಸ್ ಗೆ ಹೋದೆ. ಸ್ಕೂಲ್ ನ ಪ್ರಿನ್ಸಿಪಾಲ್ ಕೂಡ ಜೊತೆಗಿದ್ದರು. "ಸಾರ್ ನೀವಿಲ್ಲಿ ನಿಲ್ಲಿ , ಒಳಗೆ ಹೋಗಿ ಸೈನ್ ಮಾಡ್ಸಿದ್ರೆ ಮುಗೀತು " ಅಂತ ಒಂದು ಕೌಂಟರ್ ಮುಂದೆ ಇದ್ದ "Q" ನಲ್ಲಿ ನಿಲ್ಲಿಸಿ ಅದೆಲ್ಲೋ ಮಾಯವಾದರು. ಬಹುಶ: ಬೇರೆಯವರ License work ಕೂಡ ಇರಬಹುದು ಅಂತ ಯೋಚನೆ ಮಾಡ್ತಾ ಇರ್ಬೇಕಿದ್ರೆ "ಏನ್ ಬೇಕಿತ್ರೀ ?" ಅನ್ನೋ ಕರ್ಕಶ ಆದ್ರೆ ಪ್ರೀತಿ ಭರಿತ ಧ್ವನಿ ಕೇಳಿಸ್ತು. ಯಾರಪ್ಪ ಇದು ಅಂತ ತಿರುಗಿ ನೋಡಿದ್ರೆ "ಖಾಕಿ" , ಪೋಲೀಸಪ್ಪ, "ಸಾರ್ LL ಆಗಬೇಕಿತ್ತು " ಅಂದೇ "ಯೋ ಕಣ್ ಕಾಣ್ಸಲ್ವ , ನೋಡಿದ್ರೆ educated ಥರ ಇದ್ದೀಯ , ಬೋರ್ಡ್ ಓದೋಕೆ ಬರಲ್ವ ? ಬಂದ್ ಬಿಡ್ತಾರೆ " ಅಂದ್ಬಿಡೋದೇ , 'ರೀ' ಯಿಂದ 'ಯೋ' ಗೆ ಇಳಿದ ಪೋಲಿಸಪ್ಪನ ಪರಿ ನನ್ನನ್ನು ನಿಜವಾಗ್ಲೂ ಗಾಬರಿಗೊಳಿಸಿತ್ತು . ಬೋರ್ಡ್ ನೋಡಿದ್ರೆ "DL only " , ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಹೊರಗೆ ಬಂದು "LL section " ಹುಡುಕ್ತಾ ಹೋದ್ರೆ ಕಂಡಿದ್ದು ಜಾಂಬವಂತನ ಬಾಲದಂತಿದ್ದ Q ( Q ಹೇಗಿತ್ತು ಅನ್ನೋದನ್ನ ಕಲ್ಪಿಸಿಕೊಳ್ಳಿ ಅಂತ ಜಾಂಬವಂತನ ಬಾಲ ಅಂದೆ , ಹನುಮಂತನ ಬಾಲ ಅನ್ನೋ ಯಾವ ಲಕ್ಷಣವೂ ಇರಲಿಲ್ಲ ). ಹೆಂಗಸರಿಗೆ ಬೇರೇನೆ Q , ಒಂದು ಕ್ಷಣ ಅನಿಸದೆ ಇರಲಿಲ್ಲ (ಏನೂಂತ ಕೇಳಬೇಡಿ ಪ್ಲೀಸ್ )
ಈ ಬಾರಿ ಸರಿಯಾಗಿ ಬೋರ್ಡ್ ಓದಿ ನಿಂತಿದ್ದೆ. LL approve ಮಾಡೋ ಪರಮಾತ್ಮ ತುಂಬಾ ದೂರದಲ್ಲೆಲ್ಲೋ ಕುಳಿತಿದ್ರು . ಪರಮಾತ್ಮನ ಪೂಜಾರಿ ಗಣದವರು ಭಯಾನಕ ವಾತಾವರಣ ಸೃಷ್ಟಿ ಮಾಡಿದ್ರು , "ಒರಿಗಿನಲ್ಸ್ ಎಲ್ಲ ಇದ್ಯಲ್ಲ ? ಫೀಸ್ ಕಟ್ಟಿ ಬನ್ನಿ , ಎಷ್ಟು ಹೇಳಿದ್ರು ಗೊತ್ತಾಗಲ್ಲ " ಅಂತ ಗೊಣಗಾಟದ ಸಂಸ್ಕೃತ ಮಂತ್ರ ಹೇಳುತ್ತಿದ್ದರು. ನಾನು ಫೀಸ್ ಬೇರೆ ಕಟ್ಟಿಲ್ಲ , ಮ್ಯಾನೇಜ್ ಮಾಡ್ತೀವಿ ಅಂದ ಮಹಾಶಯರ ಪತ್ತೆ ಇಲ್ಲ . Q ಬಿಟ್ಟು ಹೋದ್ರೆ ಈ ದಿನವಂತೂ LL ಆಗೋ ಲಕ್ಷಣ ಖಂಡಿತ ಇಲ್ಲ. ಬಂದದ್ದು ಬರಲಿ , ಒಳಗಿರೋ ಪರಮಾತ್ಮನ ದಯೆ ಒಂದಿದ್ದರೆ LL ಸಿಕ್ಕೇ ಸಿಗುತ್ತದೆ ಅಂತ ಸುಮ್ಮನೆ ನಿಂತು ಬಿಟ್ಟೆ. ಬೇಗ ಬೇಗ ಬೇಗ ಬೇಗ ಅಂತ ಪರಮಾತ್ಮನ ಪೂಜಾರಿಗಳು ಕಿರುಚಾಡುತ್ತಿದ್ದರು . ಮಂಗಳೂರಿನ ಬಸ್ ಏಜೆಂಟ್ ಗಳ ಗಲಾಟೆಗಿಂತಲೂ ಮಿಗಿಲಾಗಿ .
ಒಳಗಿದ್ದ ಪರಮಾತ್ಮನಿಗೆ ಬಸ್ ಹಿಡಿಯುವುದಿತ್ತೇನೋ ಕಾಣೆ . LL ಕೊಡೋದೇಆತನ ಕೆಲಸ ಅಲ್ವ , ಬೇಗ ಬೇಗ ಮಾಡಿ ಗಿನ್ನೆಸ್ ರೆಕಾರ್ಡ್ ಮಾಡುವುದಿದೆಯೋ , ಅಥವಾ ಸರಕಾರ Performance Bonus ಕೊಡುತ್ತೇನೋ? ಒಳಗಿರೋ ಪರಮಾತ್ಮನೇ ಬಲ್ಲ .
ಇನ್ನೇನು ಪರಮಾತ್ಮನ ಕೌಂಟರ್ ಬಂತು , ಪರಮಾತ್ಮ ತನ್ನ ಟೇಬಲ್ ಮೇಲೆ ಇದ್ದ ಒಂದು
ಸಿಗ್ನಲ್ ಲಿಸ್ಟ್ ನಿಂದ , ಇದೇನಪ್ಪ , ಅದೇನಪ್ಪ ಅಂತ ಕೇಳ್ತಾ ಇದ್ದ , ಬಹುಶ: ಆತನಿಗೂ ಡ್ರೈವಿಂಗ್ ಕ್ಲಾಸ್ ಬೇಕಾಗಿತ್ತೇನೋ :) ನನ್ನ ಮುಂದಿದ್ದ ಇಬ್ಬರಿಗೂ LL ಸಿಗಲಿಲ್ಲ . ಸರಿಯಾಗಿ ಸಿಗ್ನಲ್ ಕಲಿತು ಸೋಮವಾರ ಮತ್ತೆ ಬನ್ನಿ ಅಂದಿದ್ದ. ಮತ್ತೆ ಬರಬೇಕಾದ ಪಾಡನ್ನು ನೆನೆದು ಪಾಪ ಅನಿಸದೆ ಇರಲಿಲ್ಲ . ಈಗ ನನ್ನ ಸರದಿ , ನನ್ನ ಮುಂದೆ ಫುಲ್ mood off ಆಗಿದ್ದ ಪರಮಾತ್ಮ . "ನಾಳೆ ಬನ್ನಿ " ಅಂತಾನೇನೋ ಅಂತ ಕೈ ಕಟ್ಟಿ ನಿಂತವನಿಗೆ ಪರಮಾತ್ಮ ಸೈನ್ ಹಾಕಿ LL ಕೊಡೋದೇ ? ಅರೆ "No questions ?" ಅಂತ ನನ್ನ ಶರೀರವನ್ನೇ question mark "?" ಮಾಡಿ ನಿಂತ್ಕೊಂಡೆ . ಪುತ್ತೂರಲ್ಲಿ issue ಮಾಡಿದ two wheeler license ಇತ್ತು ನನ್ನ ಹತ್ರ , ಈ ಸಿಗ್ನಲ್ ಪ್ರಶ್ನೆಗಳನ್ನುLL ಮಾಡಿಸುವಾಗ ಪುತ್ತೊರಿನ ಪರಮಾತ್ಮನೇ ಕೇಳಿದ್ದ .ಮತ್ತೆ ಕೇಳಿ ತನ್ನ ಸಮಯ ವೇಸ್ಟ್ ಮಾಡಲು ಈ ಪರಮಾತ್ಮ ಸಿದ್ಧನಿರಲಿಲ್ಲ. ನನ್ನ ಗಂಟೇನು ಹೋಗ್ಬೇಕು ? LL ತೆಗೊಂಡು ಹೊರಗೆ ಬಂದೆ . ಮನೆಗೆ ಮರಳಲೆಂದು ಬೈಕ್ ಸ್ಟಾರ್ಟ್ ಮಾಡುವಾಗ ಹಲ್ಲು ಗಿಂಜುತ್ತ ಬಂದಿದ್ದ ಪ್ರಿನ್ಸಿಪಾಲ್ ಮಹಾಶಯ , "ನಾನ್ ಹೇಳ್ಲಿಲ್ವ ಸಾರ್ , ನೀವೇನು ಟೆನ್ಶನ್ ಮಾಡಬೇಕಾಗಿಲ್ಲ ಅಂತ , ನಾವು ಎಲ್ಲ ಮ್ಯಾನೇಜ್ ಮಾಡ್ತೀವಿ ನಾಳೆ ೭ ಗಂಟೆಗೆ ಬೆಳಿಗ್ಗೆ ಬನ್ನಿ , ಮೊದಲ ಕ್ಲಾಸ್ ಅಲ್ವ ೧ ಗಂಟೆ ತೆಗೊಳ್ಳಿ , ನೀವೇನು ಟೆನ್ಶನ್ ಮಾಡಬೇಕಾಗಿಲ್ಲ ಎಲ್ಲ ನಿಮ್ಮ ಟೀಚರ್ ಮ್ಯಾನೇಜ್ ಮಾಡ್ತಾರೆ " ಅಂದ , ಮೇಲಿಂದ ಕೆಳಗಿನ ವರೆಗೂ ಒಮ್ಮೆ ಆತನನ್ನು ನೋಡಿ ಮನೆಗೆ ವಾಪಾಸಾದೆ, ಖುಷಿಯಿಂದ , ಯಾಕಂದ್ರೆ ಅಂತೂ ಬಂತು ಕಾರು ಕಲಿಕಾ ರಹದಾರಿ ಪತ್ರ .
ನಾಳೆ ನನ್ನ ಫಸ್ಟ್ ಕಾರ್ ಡ್ರೈವಿಂಗ್ ಕ್ಲಾಸ್ .

Sunday, August 9, 2009

ತಿರುವುಗಳು

ಕೆಲವು ನಿರ್ಧಾರಗಳೇ ಹಾಗೆ, ಜೀವನವನ್ನೇ ಬದಲಾಯಿಸಿ ಬಿಡುತ್ತವೆ. ಇಲ್ಲದಿದ್ದಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಮುಗಿಸಿ ವಿವೇಕಾನಂದ ಕಾಲೇಜಿಗೆ ಉಪನ್ಯಾಸಕನಾಗಿ ಸೇರಬೇಕಿತ್ತೆ ?

ಇಂಜಿನಿಯರಿಂಗ್ ಕೊನೆಯ ಸೆಮಿಸ್ಟರ್ ರಿಸಲ್ಟ್ ನೋಡಿ, ಬೆಂಗಳೂರಿಗೆ ಬಸ್ ಹತ್ತಿದ್ದೆ. ಬೆಂಗಳೂರು ಅನ್ನ ಕೊಡುತ್ತದೆ ಅನ್ನುವ ಕನಸು ಹೊತ್ತ ನಾಲ್ಕು ಜನ ಗೆಳೆಯರು ವಿಜಯನಗರದ ಮೂಡಲಪಾಳ್ಯದಲ್ಲೊಂದು ಬಾಡಿಗೆ ಮನೆ ಹಿಡಿದಿದ್ದೆವು. ಬಂದಿಳಿದ ಮೊದಲನೆ ವಾರ ಅರಮನೆ ಮೈದಾನದಲ್ಲಿ ನಡೆದಿದ್ದ job fair (ಉದ್ಯೋಗ ಉತ್ಸವ) ನೋಡಿ ದಂಗಾಗಿದ್ದೆವು. ಕಾಲಿಡಲು ಜಾಗವಿಲ್ಲದಷ್ಟು ಜನ ಜಾತ್ರೆ. ಬಯೋಡಾಟಾ ಪಡೆದುಕೊಂಡು ಉದ್ಯೋಗಾಕಾಂಕ್ಷಿಗಳನ್ನು ಮರಳಿ ಮನೆಗೆ ಕಳುಹಿಸುವುದಕ್ಕಿಂತಲೂ ಪಡೆದ ಬಯೊಡಾಟಾ ಕಸದ ಬುಟ್ಟಿ ಸೇರುವುದು ನೋಡಿ ಮನಸಿಗೆ ನೋವಾಗಿತ್ತು. ಸರದಿಯಲ್ಲಿ ನಿಂತ ಜನರಲ್ಲಿ ಕೆಲೆವರು "AMWAY" ಬಿಸಿನೆಸ್ ಮಾಡಲು ಜನ ಹುಡುಕುತ್ತಿದ್ದರೆ ಇನ್ನು ಕೆಲವರು ತಮ್ಮ ಕೆಲವಾರು ವರ್ಷಗಳ ಉದ್ಯೋಗ ಉತ್ಸವಗಳ ಅನುಭವವನ್ನು ವಿವರಿಸುತ್ತಿದ್ದರು. ಉದ್ಯೋಗ ಬೇಟೆಯೋ ಮಾರಿ ಹಬ್ಬವೋ ಒಂದೂ ತಿಳಿಯದೆ , ಆಕರ್ಷಕ ಮಹಡಿಗಳ ಒಳಗಿರುವ ಕನಸಿನ ಆ ಕೆಲಸ ಸಿಗುವುದು ಕಷ್ಟವೆಂದು ಯೋಚಿಸಿದ ನಾನು ಗೆಳೆಯರಿಗೆ ಹೇಳದೆ ಊರಿನ ಬಸ್ ಹಿಡಿದಿದ್ದೆ.

ಕೆಲಸ ಸಿಗಲಿಲ್ವೇ ಇನ್ನೂ ? ಕೇಳಿ ಕೇಳಿ ತಲೆ ಹಾಳಾಗಿತ್ತು. ತೋಚಿದ್ದು ಒಂದೇ ದಾರಿ. ಅಪ್ಪ ಮಾಸ್ಟ್ರು ಅಜ್ಜ ಮಾಸ್ಟ್ರು, ನೀ ನಡೆದ ಹಾದಿಯಲಿ ಅಂತ ಎರಡೂ ಕೈ ಎತ್ತಿ ಶರಣು ಅಂದಿದ್ದೆ , ಮುಂದೆ ವಿವೇಕಾನಂದ ಕಾಲೇಜ್ ಭೂತಾಕಾರವಾಗಿ ನಿಂತಿತ್ತು. ಮಕ್ಕಳ ಪ್ರೀತಿಯನ್ನು ಗಳಿಸಲು ಹೆಚ್ಚು ಸಮಯ ಬೇಕಾಗಿ ಬರಲಿಲ್ಲ. ಅಜ್ಜನ ಹಾಗೆ ಅಪ್ಪನ ಹಾಗೆ ಒಳ್ಳೆ ಮಾಸ್ಟ್ರು ಅಂತ ಹೆಸರು ಬಹಳ ಬೇಗನೆ ಬಂತು. ಹೊಸ ಕೆಲಸದೊಂದಿಗೆ ಹೊಸ ಹೊಸ ಜನರ ಪರಿಚಯವೂ ಆಗಿತ್ತು. ಅದೇ ಪರಿಚಯ ಮುಂದೆ ಪ್ರೀತಿ ಆಗಬಹುದೆಂದೂ ಆ ಪ್ರೀತಿಯಿಂದಾಗಿ ಜೀವನವೇ ಬದಲಾಗಬಹುದೆಂದೂ ಆ ದಿವಸ ಖಂಡಿತವಾಗಿಯೂ ಅನಿಸಿರಲಿಲ್ಲ. ಕೈಯ್ಯಲ್ಲಿರುವ ಕೆಲಸಕ್ಕೆ ಅದಕ್ಕಿದ್ದ ಸಂಭಾವನೆಗೆ ಮನೆಯವರು ಅದೇ ಪ್ರೀತಿಯನ್ನು ಮನೆ ತುಂಬಿಸಿಕೊಳ್ಳಲು ಒಪ್ಪುವುದು ಅಸಾಧ್ಯದ ಮಾತಾಗಿತ್ತು. ಪ್ರೀತಿಯನ್ನು ಪ್ರೀತಿಸಿ ಮದುವೆಯಾಗುವುದೊಂದೇ ಗುರಿಯಾಗಿರುತ್ತಿದ್ದರೆ ಅಲ್ಲೇ ಇದ್ದು ಮದುವೆ ಆಗಿ ಬಿಡಬಹುದಿತ್ತು. ಆದರೆ ನಮ್ಮ ಮದುವೆಗೆ ಮನೆಯವರು ಒಪ್ಪಬೇಕಿತ್ತು. ಒಪ್ಪಬೇಕಿದ್ದರೆ, ನಮಗೆ ಅಂದು ತೋಚಿದ್ದು ಒಂದೇ ಮಾತು. ಇನ್ನು ಹೆಚ್ಚು ಸಂಬಳ ಇರುವ ಕೆಲಸ ಹುಡುಕಬೇಕಾಗಿತ್ತು. ಮನೆಯವರ ಕಷ್ಟಕ್ಕೆ ಹೆಗಲು ಕೊಟ್ಟು ನಡೆಯಬೇಕಾಗಿತ್ತು. ಸಮಾಜದ ಕೊಂಕು ಮಾತುಗಳಿಗೆ ಸೊಪ್ಪು ಹಾಕದೆ ತಲೆಯೆತ್ತಿ ನಡೆಯುವಂತಹ , ಎಲ್ಲರನ್ನೂ ಜೊತೆಗೆ ನಡೆಸುವಂತಹ ಆತ್ಮವಿಶ್ವಾಸ ಬೇಕಾಗಿತ್ತು.

ಕಣ್ಣುಬಿಟ್ಟಾಗ ಕಂಡಿದ್ದು ನಿಟ್ಟೆ ಕಾಲೇಜು. ಬಹುಶಃ ಕನಸಲ್ಲೂ ಎಣಿಸದಷ್ಟು ಅವಕಾಶಗಳ ಸುರಿಮಳೆ ಹರಿಸಿದ್ದು ಈ ದಿಟ್ಟ ಹೆಜ್ಜೆ. ವಿದ್ಯಾರ್ಥಿಗಳ ಜೊತೆಗೆ ಕಳೆದ ಆ ಸಮಯ ಜವಾಬ್ದಾರಿಯ ಭಾರವನ್ನು ಕ್ಷಣಕಾಲಕ್ಕೆ ಮರೆಯಾಗಿಸಿತ್ತು. ಇನ್ನೇನು ಕಳೆದೇ ಹೊದೆನೇನೋ ಅನ್ನುವಷ್ಟರಲ್ಲಿ ಜೀವನದ ಐಷಾರಾಮಿ ಮುಖವನ್ನು ತೋರಿಸಿತ್ತು ಇನ್ಫೋಸಿಸ್ ಮೈಸೂರಿನಲ್ಲಿ ನಡೆದ ತರಬೇತಿ, ಇದೊಂದು ಕೆಲಸ ಸಿಕ್ಕಿ ಬಿಟ್ಟರೆ ಮತ್ತೆ ಹಣದ ಚಿಂತೆಯಿಲ್ಲ, ಮನೆಯವರ ಕಷ್ಟಕ್ಕೆ ಪಾಲುದಾರನಾಗಿ , ಜವಾಬ್ದಾರಿಗಳ ಹೊರೆಯನ್ನು ಬೆನ್ನಲ್ಲಿ ಸ್ವತಂತ್ರವಾಗಿ ಹೊತ್ತುಕೊಂಡರೆ, ಮದುವೆಗೆ ಮನೆಯವರನ್ನು ಒಪ್ಪಿಸುವುದು ಬಹಳ ಕಷ್ಟ ಆಗಲಾರದು ಅನ್ನುವ ಒಂದು ಆಸೆ , ಕಂಪ್ಯೂಟರ್ ಇಂಜಿನಿಯರ್ ಗಳ ವಾರಗಳ ಒಡನಾಟ ನಿಟ್ಟೆ ಯಿಂದ ಮತ್ತೆ ಬೆಂಗಳೂರಿನ ಕಾಂಕ್ರೀಟ್ ಕಾಡಿನ ಮಡಿಲಿನಲ್ಲಿ ತಂದು ಮಲಗಿಸಿತ್ತು.

ಈ ಬಾರಿ ಉದ್ಯೋಗ ಉತ್ಸವಗಳ ಗೋಜಿಗೆ ಹೋಗದೆ, ತನ್ನ ಪಾಡಿಗೆ ಒಂದು ಚಿಕ್ಕ ಕೋರ್ಸ್ ಮಾಡಿಕೊಂಡು ಅದಕ್ಕೆ ತಕ್ಕಂತೆ ಚಿಕ್ಕದಾದ ಕೆಲಸ ಹಿಡಿಯುವುದು ಕಷ್ಟವಾಗಲಿಲ್ಲ. ಚಿಕ್ಕದಾದ ಆ ಕೆಲಸವೇ ಮುಂದೆ ಬೆಳೆದು ಹೆಮ್ಮರವಾಗಿ ಜೀವನಕ್ಕೆ ಆಸರೆಯಾಗಿ ಮನೆಯವರನ್ನು ಒಪ್ಪಿಸಿ, ಬಯಸಿದ ಪ್ರೀತಿಯನ್ನು ಮದುವೆಯಾಗಿಸಿತ್ತು. ವರ್ಷಗಳಿಂದ ಆಸೆಯಗಿದ್ದದ್ದು ಇದ್ದಕ್ಕಿದ್ದಂತೆಯೇ ವಸ್ತುಸ್ಥಿತಿಯಾಗಿತ್ತು. ಅನಿಸಿದ್ದನ್ನು ಮಾಡಿ ತೋರಿಸಿಯಾಗಿತ್ತು.

ಇಂದು ಬೆಳಿಗ್ಗೆ ಬೇರೊಂದು ಕಂಪನಿಯಲ್ಲಿ ಸಿಕ್ಕಿದ ಆಫರ್ ನಿಂದಾಗಿ ಅದೇ ಚಿಕ್ಕ ಕೆಲಸಕ್ಕೆ ದೊಡ್ಡದಾದ ರಾಜಿನಾಮೆಯನ್ನು ಕೊಟ್ಟು ಮನೆಗೆ ಬಂದಾಗ ವಿವೇಕಾನಂದ ಕಾಲೇಜ್ ಗೆ ಅಪ್ಪ ಮಾಸ್ಟ್ರು ಅಜ್ಜ ಮಾಸ್ಟ್ರು ನಾನೂ ಮಾಸ್ಟ್ರು ಅಂತ ತೆಗೆದ ನಿರ್ಧಾರ ಎಷ್ಟು ಸಮಂಜಸವಾಗಿತ್ತು ಅಂತ ಅನಿಸದೆ ಖಂಡಿತ ಇರಲಿಲ್ಲ. ಥ್ಯಾಂಕ್ಸ್ ಪ್ರೀತಿ.

ಕೆಲವು ನಿರ್ಧಾರಗಳೇ ಹಾಗೆ, ಜೀವನವನ್ನೇ ಬದಲಾಯಿಸಿ ಬಿಡುತ್ತವೆ. ಇಲ್ಲದಿದ್ದಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಮುಗಿಸಿ ವಿವೇಕಾನಂದ ಕಾಲೇಜಿಗೆ ಉಪನ್ಯಾಸಕನಾಗಿ ಸೇರಬೇಕಿತ್ತೆ ?